ಪ್ರವಾಹದಲ್ಲಿ ಕೊಚ್ಚಿಬಂದ ಪೆಟ್ಟಿಗೆಯಲ್ಲಿ ಕೆಜಿಗಟ್ಟಲೆ ಚಿನ್ನ, ನಗದು..! ಮಾಲೀಕರಿಗಾಗಿ ಸ್ಥಳೀಯರ ಹುಡುಕಾಟ
ಪ್ರವಾಹದಲ್ಲಿ ಕೊಚ್ಚಿಬಂದ ಪೆಟ್ಟಿಗೆಯಲ್ಲಿ ಕೆಜಿಗಟ್ಟಲೆ ಚಿನ್ನ, ನಗದು..! ಮಾಲೀಕರಿಗಾಗಿ ಸ್ಥಳೀಯರ ಹುಡುಕಾಟ
ನೇಪಾಳದ ತ್ರಿಶೂಲಿ ನದಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಬಂದಿದ್ದ ದೊಡ್ಡ ಪೆಟ್ಟಿಗೆಯೊಂದನ್ನು ಸ್ಥಳೀಯರು ತೆರೆದು ನೋಡಿದಾಗ, ಅದರಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು ಹಣ ಹಾಗೂ ‘ಜಯ್ ಶ್ರೀ ಮಹಾಲಕ್ಷ್ಮಿ ಗೋಲ್ಡ್ ಅಂಡ್ ಸಿಲ್ವರ್ ಶಾಪ್’ ಹೆಸರಿನ ಬಿಲ್ ಪತ್ತೆಯಾಗಿದೆ.
ಹೌದು….ನೇಪಾಳದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ತ್ರಿಶೂಲಿ ನದಿ ಉಕ್ಕಿ ಹರಿದಿದ್ದು, ದಂಡೆಯಲ್ಲಿದ್ದ ಮನೆ-ಮಠಗಳು ಕೊಚ್ಚಿಹೋಗಿವೆ. ನೀರಿನ ಆರ್ಭಟಕ್ಕೆ ಮನೆಗಳಲ್ಲಿದ್ದ ಬೆಲೆಬಾಳುವ ವಸ್ತುಗಳು ಕೊಚ್ಚಿಕೊಂಡು ಬಂದಿದ್ದು, ಹಾಗೆ ತೇಲಿ ಬಂದಿದ್ದ ಬೃಹತ್ ಪೆಟ್ಟಿಗೆಯೊಂದನ್ನು ತ್ರಿಶೂಲಿ ಬಜಾರ್ ಬಳಿ ಸ್ಥಳೀಯರು ದಂಡೆಗೆ ಎಳೆದು ಹೊರತೆಗೆದಿದ್ದಾರೆ.
ಆ ಪೆಟ್ಟಿಗೆಯನ್ನು ತೆರೆದಾಗ ಒಳಗಡೆ ಕಂತೆ ಕಂತೆ ನಗದು ಹಣ, ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಜೊತೆಗೆ ಆಭರಣ ಖರೀದಿಸಿದ್ದ ‘ಜಯ್ ಶ್ರೀ ಮಹಾಲಕ್ಷ್ಮಿ ಗೋಲ್ಡ್ ಅಂಡ್ ಸಿಲ್ವರ್ ಶಾಪ್’ ಹೆಸರಿನ ಬಿಲ್ ಕೂಡ ಸಿಕ್ಕಿದೆ. ಈ ಸನ್ನಿವೇಶದಲ್ಲೂ ಪ್ರವಾಹ ಸಂತ್ರಸ್ತರ ಆಸ್ತಿಗೆ ಆಸೆಪಡದ ಸ್ಥಳೀಯರು, ಬಿಲ್ ಪ್ರತಿಯನ್ನು ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕಷ್ಟದ ಸಮಯದಲ್ಲೂ ಸ್ಥಳೀಯರು ತೋರಿದ ಈ ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.