
ಧಾರವಾಡ: ಮೊಬೈಲ್ ಜಗಳ ಕೊಲೆಯಲ್ಲಿ ಅಂತ್ಯ
ಧಾರವಾಡ: ಮೂರ್ನಾಲ್ಕು ಜನ ಯುವಕರ ನಡುವೆ ಕಳೆದ ರಾತ್ರಿ ನಡೆದ ಮೊಬೈಲ್ ಜಗಳ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.
ಹೌದು! ಧಾರವಾಡದ ಐನಾಕ್ಸ್ ಬಳಿಯ ಖುಲ್ಲಾ ಜಾಗದಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು. ಆ ಯುವಕನ ಕುತ್ತಿಗೆ ಸೀಳಿ ಕೊಲೆ ಮಾಡಲಾಗಿತ್ತು. ಇದೀಗ ಈ ಕೊಲೆಗೆ ಮೊಬೈಲ್ ಜಗಳವೇ ಕಾರಣ ಎಂಬುದು ಪ್ರಾಥಮಿಕವಾಗಿ ಗೊತ್ತಾಗಿದೆ.
ಲಕ್ಷ್ಮೀ ಸಿಂಗನಕೇರಿಯ ಹನುಮಂತ ಅಣ್ಣಿಗೇರಿ (26) ಎಂಬ ಯುವಕನನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ಇದಕ್ಕೂ ಮುನ್ನ ಮೂರ್ನಾಲ್ಕು ಜನ ಯುವಕರ ನಡುವೆ ಮೊಬೈಲ್ ವಿಷಯಕ್ಕಾಗಿ ಜಗಳ ನಡೆದಿತ್ತು. ಹನುಮಂತ ಹಾಗೂ ಇಬ್ಬರು ಯುವಕರ ಮಧ್ಯೆ ಕಳೆದ ರಾತ್ರಿ ಈ ಜಗಳ ನಡೆದಿತ್ತು. ಜಗಳ ನಡೆದ ಸಂದರ್ಭದಲ್ಲಿ ಹನುಮಂತನ ಸಹೋದರ ಸ್ಥಳಕ್ಕೆ ಬಂದು ಈ ಜಗಳ ಬಿಡಿಸಿ, ಹನುಮಂತನಿಗೆ ಮನೆಗೆ ಹೋಗುವಂತೆ ಹೇಳಿ ಹೋಗಿದ್ದ. ಆದರೆ, ಹನುಮಂತ ಮಾತ್ರ ಮನೆಗೆ ಹೋಗಿರಲಿಲ್ಲ. ತಡರಾತ್ರಿಯಾದರೂ ಆತ ಮನೆಗೆ ಹೋಗಿರಲಿಲ್ಲ. ಆದರೆ, ಬೆಳಗಿನ ಜಾವ ಆತನ ಶವ ಐನಾಕ್ಸ್ ಬಳಿ ಪತ್ತೆಯಾಗಿದೆ. ಈ ಕೊಲೆಯನ್ನು ಆತನ ಜೊತೆ ಜಗಳ ಮಾಡಿದವರೇ ಮಾಡಿರಬಹುದು ಎಂದು ಹನುಮಂತನ ಸಹೋದರ ಸಂಶಯ ವ್ಯಕ್ತಪಡಿಸಿದ್ದಾನೆ.
ಹನುಮಂತ ತೀರಾ ಬಡ ಕುಟುಂಬದ ಯುವಕ. ಕಟ್ಟಡ ಕೆಲಸ ಮಾಡುತ್ತಿದ್ದ. ಮೊಬೈಲ್ ವಿಷಯಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದು ದುರಂತ. ಧಾರವಾಡದಲ್ಲಿ ಕೊಲೆ ಎಂಬುದು ಹುಡುಗರ ಆಟವಾದಂತಾಗಿದೆ. ಇಂತಹ ಘಟನೆಗಳು ನಡೆಯಬಾರದು. ಈ ಕೊಲೆ ಮಾಡಿದವರು ಯಾರು ಎಂಬುದನ್ನು ಪೊಲೀಸರು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಗುರಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

